Abu Hisham Saquafi

Official Website Of Hafiz Ilyas Saquafi Padaladka

Sunday, July 31, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -45 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು 

ಪ್ರವಾದಿಯವರು ﷺ ವಿವರಿಸ ತೊಡಗಿದರು. ಖದೀಜ ನಾನು ನಿಮ್ಮಲ್ಲಿ ಕನಸಿನಲ್ಲಿ ಬರುತ್ತಿದ್ದ ಒಬ್ಬರ ಕುರಿತು ಹೇಳುತ್ತಿದ್ದೆ ಅಲ್ಲವೇ. ವಾಸ್ತವದಲ್ಲಿ ಅವರೇ ಮಲಕ್ ಜಿಬ್'ರೀಲ್ (ಅ) ಆಗಿರುತ್ತಾರೆ. ಇವತ್ತು ಅವರು ಖುದ್ದಾಗಿ ನನ್ನ ಬಳಿ ಬಂದಿದ್ದರು. ನಂತರದ ಪ್ರತಿಯೊಂದು ವಿಷಯವನ್ನು ಪ್ರೀತಿಯ ಪತ್ನಿ ಖದೀಜರಲ್ಲಿ (ರ) ಹಂಚಿಕೊಂಡರು. ಕೊನೆಗೆ ಪ್ರಿಯೆ ನಾನು ಬಹಳಷ್ಟು ಹೆದರಿಕೊಂಡಿದ್ದೆ ಇದೇನಾಗುತ್ತಿದೆ ಎಂದು ಹೇಳಿದಾಗ, ತಕ್ಷಣವೇ ಖದೀಜರು (ರ) ನೀವು ಭಯ ಪಡಬೇಡಿರಿ, ಏನೇಯಾದರು ತಮಗೆ ಒಳಿತು ಮಾತ್ರವೇ ಉಂಟಾಗುವುದು. ಕಾರಣ ನೀವು ಕುಟುಂಬ ಸಂಬಂಧಗಳನ್ನು ಸೇರಿಸುವ ವ್ಯಕ್ತಿಯಲ್ಲವೇ, ಸತ್ಯವನ್ನು ಮಾತ್ರ ಹೇಳುವ, ಅಥಿತಿಗಳನ್ನು ಒಳ್ಳೆಯ ರೀತಿಯಲ್ಲಿ ಸತ್ಕರಿಸುವ, ವಿಶ್ವಾಸದೊಂದಿಗೆ ನೀಡಿದ ವಸ್ತುಗಳನ್ನು ಬಹಳ ಜಾಗರೂಕತೆಯಿಂದ ನೋಡಿಕೊಳ್ಳುವ, ನಿರಾಶ್ರಿತರಿಗೆ ವಸತಿ ಕಲ್ಪಿಸುವ, ಇತರರ ನೋವನ್ನು ಹಗುರಗೊಳಿಸುವ ವ್ಯಕ್ತಿಯಾಗಿದ್ದೀರಿ ಅಲ್ಲವೇ.! ಅಲ್ಲಾಹನಾಣೆ ನಿಮ್ಮನ್ನು ಅವರು ನಿರಾಶೆ ಮಾಡಲಾರರು, ಅಲ್ಲಾಹನಿಂದ ಸಿಕ್ಕಿದ್ದನ್ನು ನಿಶ್ಚಿಂತೆಯಿಂದ ಸ್ವೀಕರಿಸಿರಿ. ಖಂಡಿತವಾಗಿಯೂ ಅದು ಸತ್ಯ ಮಾತ್ರವೇ ಆಗಿರುತ್ತದೆ ಎಂದು ಹೇಳಿದರು.

     ಪ್ರೀತಿಯ ಪತಿಗೆ ಸಮಾಧಾನ ಪಡಿಸಿ, ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಟ್ಟು. ಖದೀಜ (ರ) ಅಲ್ಲಿಂದ ಹೊರಗೆ ಬಂದು ಉತುಬನ ಸೇವನಾಗಿದ್ದ ಅದ್ದಾಸ್ ಎನ್ನುವ ವ್ಯಕ್ತಿಯನ್ನು ಭೇಟಿಯಾದರು. ನೀನವ ಪ್ರದೇಶದ ಶುದ್ಧ ಕ್ರೈಸ್ತ ವಿಶ್ವಾಸಿಯಾದ ವ್ಯಕ್ತಿಯಾಗಿದ್ದರು ಅದ್ದಾಸ್. ಖದೀಜ (ರ) ಅದ್ದಾಸ್'ನ ಬಳಿ ಬಂದು ಓ ಅದ್ಸಾಸ್ ನಿಮ್ಮಿಂದ ಒಂದು ವಿಷಯಕ್ಕೆ ಸ್ಪಷ್ಟವಾದ ಉತ್ತರ ಬೇಕಾಗಿತ್ತು, ನಿಮಗೆ ಜಿಬ್'ರೀಲರ (ಅ) ಕುರಿತು ಏನಾದರೂ ತಿಳಿದಿದಿಯೇ ಎಂದು ಕೇಳಿದರು. ತಕ್ಷಣವೇ ಅದ್ದಾಸ್ ಖುದ್ದೂಸುನ್.. ಪರಿಶುದ್ಧನು ಪರಿಶುದ್ಧನು. ವಿಗ್ರಹಗಳನ್ನು ಆರಾಧಿಸುವ ಈ ಸ್ಥಳದಲ್ಲಿ ಜಿಬ್'ರೀಲಿಗೆ (ಅ) ಏನು ಕೆಲಸ.? ಎಂದು ಅದ್ದಾಸ್ ಹೇಳಿದರು. ನಿಮಗೆ ಜಿಬ್'ರೀಲರ (ಅ) ಕುರಿತು ತಿಳಿದಿರುವಷ್ಟು ಹೇಳುವಿರ.? ಎಂದು ಖದೀಜ (ರ) ಪುನಃ ಕೇಳಿದಾಗ, ಅಲ್ಲಾಹುವಿನ ನಂಬಿಕಸ್ತ ದೂತರಾಗಿದ್ದಾರೆ ಅವರು. ಅವನ ಸಂದೇಶಗಳನ್ನು ಪ್ರವಾದಿಯರಿಗೆ ತಲುಪಿಸುವ ಮಲಕ್. ಪ್ರವಾದಿ ಮೂಸ (ಅ) ಹಾಗೂ ಈಸಾರ(ಅ) ಆತ್ಮೀಯ ಮಿತ್ರ, ಹೀಗೆ ಬಹಳಷ್ಟು ಪ್ರಾಮುಖ್ಯತೆ ಹೊಂದಿದ ಮಲಕ್ ಆಗಿದ್ದಾರೆ ಎಂದು  ಅದ್ದಾಸ್ ಹೇಳಿ ನಿಲ್ಲಿಸಿದರು. ಖದೀಜ (ರ) ಅಲ್ಲಿಂದ ತಮ್ಮ ಮನೆಗೆ ಹಿಂತಿರುಗಿ ಬಂದ ನಂತರ, ಪತಿಯನ್ನು ಕರೆದುಕೊಂಡು ವೇದ ಜ್ಞಾನಿಯಾದ ವರಕತ್ ಬಿನ್ ನೌಫಲ್'ರನ್ನು ಭೇಟಿಯಾಗಳು ಹೊರಟರು. ನೌಫಲ್ ವಿವರಣೆಯನ್ನು ಕೇಳಿದಾಗ ಪ್ರವಾದಿವರ್ಯರು ﷺ ಎಲ್ಲವನ್ನು ಸ್ಪಷ್ಟವಾಗಿ ವಿವರಿಸಿದರು. ನೌಫಲ್ ಎಲ್ಲವನ್ನು ಕೇಳಿದ ನಂತರ, ನೀವು ಸಂತೋಷ ಪಡಿ, ಮರ್'ಯಮಿನ ಮಗನಾದ ಈಸ (ಅ) ಮುನ್ಸೂಚನೆ ನೀಡಿದ ಪ್ರವಾದಿಯಾಗಿರುತ್ತೀರಿ ನೀವು. ಪ್ರವಾದಿ ಮೂಸರ (ಅ) ಬಳಿ ಬರುತ್ತಿದ್ದ ನಾಮುಸ್ ಅಥವಾ ಜಿಬ್'ರೀಲರೇ ಆಗಿರುತ್ತಾರೆ ನಿಮ್ಮನ್ನು ಕೂಡ ಭೇಟಿಯಾದದ್ದು.

      ಖಂಡಿತವಾಗಿಯೂ ಪ್ರಬೋಧನೆಯ ಜವಾಬ್ದಾರಿಯನ್ನು ಹೊತ್ತುಕೊಂಡ ಪ್ರವಾದಿಯಾಗಿರುತ್ತೀರಿ ನೀವು ಅದರಲ್ಲಿ ಯಾವುದೇ ಸಂದೇಹವಿಲ್ಲ.  ಜಿಹಾದಿಗಾಗಿ ಆದೇಶ ನೀಡಲಾಗುವುದು, ಜನರು ನಿಮ್ಮನ್ನು ಬಹಳಷ್ಟು ಟೀಕಿಸುವರು, ಈ ಊರಿನಿಂದ ಪಲಾಯನ ಮಾಡಬೇಕಾಗಿ ಬರುವುದು, ಬಹಳಷ್ಟು ತೊಂದರೆಗಳು ಎದುರಿಸಬೇಕಾಗಿ ಬರುವುದು. ಬಹುಶಃ ಅಂದು ನಾನಿರುತಿದ್ದರೆ ಸಂಪೂರ್ಣ ಬೆಂಬಲ ನೀಡುತ್ತಿದ್ದೆ. ಎಂದು ನೌಫಲ್ ಹೇಳಿದರು. ನಾನು ಈ ಊರು ಬಿಟ್ಟು ಹೋಗಬೇಕಾಗಿ ಬರುವುದೇ.? ಎಂದು ಪ್ರವಾದಿಯವರು ﷺ ಕೇಳಿದಾಗ. ಹೌದು.! ಸತ್ಯ ಸಂದೇಶವಾಹಕರಾಗಿ ಬಂದ ಎಲ್ಲಾ ಪ್ರವಾದಿಯರೂ ಕೂಡ ಟೀಕಿಸಲ್ಪಟ್ಟಿದ್ದಾರೆ, ತೊಂದರೆಗಳನ್ನು ಅನುಭವಿಸಿದ್ದಾರೆ, ಎಂದು ಹೇಳಿ ನೌಫಲ್ ಎದ್ದು ನಿಂತು ಪ್ರವಾದಿಯವರ ﷺ ತಲೆಯನ್ನು ಸ್ಪರ್ಶಿಸಿ ವಂದನೆ ಸಲ್ಲಿಸಿದರು. (ಹೆಚ್ಚು ಕಾಲ ಉಳಿಯಲಿಲ್ಲ ಅವರು ಇಹಲೋಕ ತ್ಯಜಿಸಿದರು) ಖದೀಜ (ರ) ಹಾಗೂ ಪ್ರವಾದಿಯವರು ﷺ ಮನೆಗೆ ಹಿಂತಿರುಗಿದರು. 

    ಪ್ರವಾದಿಯವರು ﷺ ಮೂರು ದಿನಗಳ ವರೆಗೆ ಮನೆಯಲ್ಲೇ ಕಾಲ ಕಳೆದರು. ತನ್ನ ಜವಾಬ್ದಾರಿಯ ಹಿರಿಮೆಯ ಕುರಿತು ಚಿಂತನೆಗಳು ಅಧಿಕವಾಯಿತು. ಜಿಬ್'ರೀಲರನ್ನು (ಅ) ಭೇಟಿಯಾಗುವ ಭಯವು ದೂರವಾಗಿ ಇನ್ನೂ ಯಾವಾಗ ಅವರನ್ನು ನೋಡುವುದೋ ಎನ್ನುವ ಆಲೋಚನೆ ಬರತೊಡಗಿತು. ಭಯವನ್ನು ಬಿಟ್ಟು ಜಿಬ್'ರೀಲರನ್ನು (ಅ) ಭೇಟಿಯಾಗಲು ಕಾಯುವ ಮಟ್ಟಕ್ಕೆ ತಲುಪಿದರು. ಪ್ರವಾದಿಯವರು ﷺ ಮನೆಯಿಂದ ಹೊರಗೆ ಬಂದು ಕಅಬಾಲಯದ ಕಡೆಗೆ ನಡೆದರು. ತಕ್ಷಣವೇ ಅದೋ ಒಂದು ಶಬ್ದ ಕೇಳಿಸಿತು, ಹಿಂತಿರುಗಿ ನೋಡಿದಾಗ ಯಾರನ್ನು ಕಾಣಲಿಲ್ಲ. ಯಾ ಮುಹಮ್ಮದ್ ﷺ.. ಓ ಮುಹಮ್ಮದರೇ ﷺ.. ಎಂದು ಕೂಗುವುದು ಕೇಳಿ ಪ್ರವಾದಿಯವರು ﷺ ಮೇಲೆ ನೋಡಿದರು. ಹಿರಾ ಗುಹೆಯಲ್ಲಿ ಕಂಡ ಮಲಕ್ ಜಿಬ್'ರೀಲ್ (ಅ) ಆಗಿದ್ದರು. ಅದ್ಭುತವಾದ ನೋಟವಾಗಿತ್ತು ಅದು. ಆಕಾಶ, ಭೂಮಿಯ ನಡುವೆ ಒಂದು ಗಂಭೀರವಾದ ಹಾಸನದಲ್ಲಿ ಕುಳಿತಿದ್ದ ದೃಶ್ಯವಾಗಿತ್ತು ಅದು. ಪ್ರವಾದಿಯವರಲ್ಲಿ ﷺ ಪುನಃ ಉತ್ಸಾಹ ಅಧಿಕಗೊಂಡಿತು. ಪ್ರವಾದಿಯವರು ﷺ ಮನೆಗೆ ಹಿಂತಿರುಗಿ ಹೋದರು. 

(ಮುಂದುವರಿಯುವುದು)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: